ಅರಸಿನ ಕೃಷಿ ನಮ್ಮ ಕೃಷಿ ಭೂಮಿಗೆ ಸಮರ್ಪಕ

ಹಲ್ದಿ ಔರ್ ಚಂದನ್ ಕೇ ಗುಣ ಸಮಾಯೇ…

ಅರಶಿನ ನಮಗೆಲ್ಲ ಬೇಕಾದಂತಹ ಒಂದು ಉಪಯುಕ್ತ ಕೃಷಿ ಉತ್ಪನ್ನ ಎಂಬಲ್ಲಿ ಎರಡು ಮಾತಿಲ್ಲ. ಆಯುರ್ವೇದಿಕ ಸಂಹಿತೆಗಳಿಗಿಂತಲೂ ಪುರಾತನವಾದ ಇತಿಹಾಸ ಅರಶಿನಕ್ಕಿದೆ. ಅರಸಿನದ ಎಲೆ, ಹಸಿ ಅರಸಿನ, ಹರಿದ್ರಾ ರಸ ಸಾರ, ಅರಸಿನ ಪುಡಿ, ಅರಸಿನದಿಂದ ತಯಾರಿಸಿದ ಎಣ್ಣೆಗಳು ಹಾಗೂ ಔಷಧಗಳು ಅನೇಕ.

ಇದರ ಉಪಯುಕ್ತತೆಯ ಬಗ್ಗೆ ರೂಪದರ್ಶಿಗಳು, ಆರೋಗ್ಯ ಸಲಹೆಗಾರರು, ವೈದ್ಯರು ಹಾಗೂ ಸಾಂಪ್ರದಾಯಸ್ಥರು ಮಾರ್ಮಿಕವಾಗಿ ಹೇಳುತ್ತಲೇ ಇರುತ್ತಾರೆ. ಆದರೂ, ಕೃಷಿಕರು, ಅಧಿಕಾರಿಗಳು, ತಜ್ಞರು ಹಾಗೂ ಅಭಿವೃದ್ಧಿ ಇಲಾಖೆಯ ಸಲಹೆಗಾರರ ಓಲೈಕೆಯ ಶಿಫಾರಸುಗಳು ಇದಕ್ಕೆ ಸಮಾನವಾಗಿ ಸರಿಹೊಂದುವುದಿಲ್ಲ. ಈ ಕಾರಣಕ್ಕಾಗಿ ಡಿಮಾಂಡ್ ಟು ಸಪ್ಲೈಯಲ್ಲಿ ಬಹಳ ತಾರತಮ್ಯ ಉಂಟಾಗುತ್ತದೆ.

Turmeric-slices

ಇದರ ಪರಿಣಾಮವೇ ಮಾರುಕಟ್ಟೆಯ ಗುಣಮಟ್ಟದ ಕೊರತೆ ಹಾಗೂ ಕಲಬೆರಕೆಗೆ ಆಹ್ವಾನ ನೀಡುತ್ತದೆ. ನಮ್ಮ ಮಾರುಕಟ್ಟೆಗಳಲ್ಲಿ ಇಂದು ಗ್ರಾಹಕರಿಗೆ ಪೂರೈಸುವಷ್ಟು ಮಟ್ಟಿಗೆ ಅರಸಿನ ಲಭ್ಯವಿಲ್ಲ. ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಅರಸಿನದಲ್ಲಿ ಭಾರತದ್ದೇ ಮೇಲುಗೈ (ಕಳಪೆ ಗುಣಮಟ್ಟದಲ್ಲೂ?).

ಇದಕ್ಕೆಲ್ಲಾ ಕಚ್ಚಾ ವಸ್ತುವಾದ ಉತ್ತಮ ಗುಣಮಟ್ಟದ ಅರಿಶಿಣ ಗಡ್ಡೆಯನ್ನು ಪೂರೈಸಬೇಕಾದವರು ನಾವು ಕೃಷಿಕರು ಏನು ಮಾಡುತ್ತಿದ್ದೇವೆ ಮತ್ತು ಮಾಡಬಹುದು?

ನಾನು ಕಳೆದ ಕೆಲ ವರ್ಷಗಳಿಂದ ಕೆಲವು ಸಾಲು ಅರಶಿನದ ಕೃಷಿ ಮಾಡುತ್ತಾ ಬಂದಿದ್ದೇನೆ. ಹಿಂದಿನ ಕೆಲ ವರ್ಷಗಳಲ್ಲಿ ಬೇಯಿಸಿ, ಕುಯ್ದು, ಒಣಗಿಸಿ, ಪುಡಿ ಮಾಡಿಸುತ್ತಿದ್ದುದಾದರೂ, ಈ ವರ್ಷ ಹಸಿಯನ್ನೇ ತುಂಡರಿಸಿ, ಒಣಗಿಸಿ, ಪುಡಿ ಮಾಡುವ ಯೋಚನೆ ಇದೆ.

ನನ್ನ ಮಿತ್ರರೊಬ್ಬರು ಸ್ವಲ್ಪ ಹೆಚ್ಚೇ ಕೃಷಿ ಮಾಡಿ ಪುಡಿ ತಯಾರಿಸಿ ಮಾರುತ್ತಾರೆ. ಅವರಿಗಂತೂ ಸ್ಥಿರವಾದ ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡು ಖರೀದಿಸುವ ಗಿರಾಕಿಗಳಿದ್ದಾರೆ. ಅವರು ಮಾಂಸಾಹಾರಿಗಳಾದ್ದರಿಂದ ಅವರಿಗೆ ಇದರ ಉಪಯೋಗವೂ ಜಾಸ್ತಿಯೇ ಇದೆ.

ಶುದ್ಧ ಅರಶಿನದ ಗಡ್ಡೆ , ಪುಡಿ, ಅದರಲ್ಲಿ ತಯಾರಿಸಿದ ಉಪ್ಪಿನಕಾಯಿ, ಪದಾರ್ಥಗಳ ಘಮ-ಘಮ ಪರಿಮಳವೋ, ರುಚಿಯೋ, ಆಹಾ.. ಅಪರಂಪಾರ.

ಅರಿಶಿನದ ಕೃಷಿ ಸುಲಭ ಸಾಧ್ಯ ಕೂಡ ಆಗಿರುವಾಗ ಇದರ ಸ್ವಯಂಪೂರ್ಣತೆಯನ್ನು ಕಾಣಲು ನಾವೇನು ಮಾಡಬಹುದು?

ಮಳೆಗಾಲದ ಆರಂಭದಲ್ಲಿ ಒಂದಷ್ಟು ಸಾಲುಗಳನ್ನು ನಾಟಿ ಮಾಡಿಬಿಟ್ಟರೆ ಸಾಕು. ಸ್ವಲ್ಪ ಸಾವಯವದಿಂದ ಕೂಡಿಕೊಂಡು ಹಸನಾದ ಸಾಲುಗಳಷ್ಟೇ ಬೇಕಾಗಿರುವುದು. ಚಳಿಗಾಲದ ಕೊನೆಯಲ್ಲಿ ಇದು ಕೊಯ್ಲಿಗೆ ಸಿದ್ಧವಾಗುತ್ತದೆ. ಕೊಯ್ಲೋತ್ತರ ಸಂಸ್ಕರಣೆಯು ಅಷ್ಟೇನು ಕಷ್ಟ ಸಾಧ್ಯವಲ್ಲ. ಎಷ್ಟು ಸುಲಭ ಅಂದರೆ ಸ್ವಚ್ಛ ಮಾಡಿ ಕತ್ತರಿಸಿ ಒಣಗಿಸಿದಾಗ ಪುಡಿ ಮಾಡಲು ಸಿದ್ಧ.

“ನಾನು ನಾಗರಪಂಚಮಿ, ಚೌತಿಗೆ ಅರಶಿನ ಎಲೆ ಮಾರಿಯೇ ಲಾಭ ಗಳಿಸುತ್ತಿದ್ದೇನೆ. ಅಂಗಡಿಯಲ್ಲಾಗಲಿ, ಅವರ ಗಿರಾಕಿಗಳೇ ಆಗಲಿ ಬೆಲೆಯ ವಿಷಯದಲ್ಲಿ ಕಿರಿ ಕಿರಿಯೇ ಮಾಡುವುದಿಲ್ಲ. ಪುರುಸೊತ್ತಿಗೆ ತಕ್ಕಂತೆ ಗಡ್ಡೆ ಕೀಳುತ್ತೇನೆ. ಕೆಲವೊಂದು ಹಾಗೆಯೇ ಮುಂದಿನ ವರ್ಷಕ್ಕೆ ಬಿಟ್ಟು ಬಿಡುತ್ತೇನೆ”, ಎನ್ನುವ ಆರಾಮ ಕೃಷಿಕ – ಕಾಸರಗೋಡಿನ ಮೋಹನಣ್ಣ.

“ದೊಡ್ಡ ಶೀಶೆ ತೆಗೊಳ್ಳಿ, ಉಪಯೋಗ ಆಗುತ್ತದೆ ಹಾಗೂ ಮಿತವ್ಯಯವೂ ಆಗುತ್ತದೆ”, ಎನ್ನುತಿದ್ದ ಪವಿತ್ರಕ್ಕನಲ್ಲಿ ಈಗ ಹರಿದ್ರಾ ಸ್ಟಾಕ್ ಇಲ್ಲ.

Different-varieties-of-turmeric

ಅರಸಿನ ಕೃಷಿ ನಮ್ಮ ಆರೋಗ್ಯಕ್ಕೆ ಪೂರಕ ಮಾತ್ರವಲ್ಲ, ನಮ್ಮ ಕೃಷಿಯಲ್ಲಿ ಹಲವಾರು ರೋಗರುಜಿನಗಳ ನಿವಾರಣೆಯಲ್ಲಿ ಪಾತ್ರವಹಿಸುವುದರಲ್ಲಿ ಸಂದೇಹವಿಲ್ಲ. ಕುರ್ಕುಮಿನ್ ನ ಪೇಟೆಂಟ್ ಅಮೆರಿಕಾದ ಬಳಿ ಹಿಂತೆಗೆಸಿಕೊಂಡ ಭಾರತ ಸರಕಾರದ ಮರ್ಯಾದೆ ಉಳಿಸಿ ಆತ್ಮ ನಿರ್ಭರತಾ ಪ್ರದರ್ಶಿಸಲು ನಮ್ಮಿಂದಲಷ್ಟೇ ಸಾಧ್ಯ.
ಇಳುವರಿ, ಆದಾಯ, ಉಪಯುಕ್ತತೆ ಎಲ್ಲಾ ರೀತಿಯಲ್ಲಿ ನೋಡಿದಾಗಲೂ ಇದುವೇ ಪರ್ಯಾಯ ಬೆಳೆಯೂ, ಉಪ ಬೆಳೆಯೂ, ಎಲ್ಲವೂ.

ತಿಂಡಿ, ಪದಾರ್ಥಕ್ಕೆ ರುಚಿಕರ, ಆರೋಗ್ಯಕ್ಕೆ ಆಧಾರ, ಪರಿಸರ ಸಂರಕ್ಷಕ, ವಿಷಹರ, ಕ್ಯಾನ್ಸರ್ ನಿವಾರಕ, ನಮ್ಮ ಕೃಷಿ ಭೂಮಿಗೆ, ಜೀವನ ಶೈಲಿಗೆ ಸಮರ್ಪಕವಾದ ಅರಶಿನ ಕೃಷಿಗೆ ಹೆಚ್ಚು ಒತ್ತು ಕೊಡಿ. ನೆರೆಹೊರೆಯಲ್ಲಿ ಪ್ರೇರೇಪಿಸಿ, ಉತ್ತಮ ಬೀಜಗಳು ಕೈಯಲ್ಲಿರುವ ಕೃಷಿಕರು ದಯವಿಟ್ಟು ವೈಯಕ್ತಿಕವಾಗಿಯೂ, ಸಾಮಾಜಿಕ ಜಾಲದಲ್ಲಿಯೂ ಗ್ರೂಪಿನಲ್ಲಿ ಮಾಹಿತಿ ಹಂಚಿಕೊಂಡು ವಿನಿಮಯ ಮಾಡಿಕೊಳ್ಳಿ.

-ಮುರಲೀಕೃಷ್ಣ ಎಡನಾಡು.

Leave a Comment

Your email address will not be published. Required fields are marked *

Scroll to Top